ಸಂಪಾದಕೀಯ...
ನಮಸ್ಕಾರ,
ಜೂನ್ ತಿಂಗಳು…ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ಸಮಯ. ಆದರೆ ಎಲ್ಲಿದೆ ಮಳೆ? ಹವಾಮಾನದ ಮುನ್ಸೂಚನೆಯ ಪ್ರಕಾರ ಒಂದು ವಾರ ಮೊದಲೇ ಪ್ರಾರಂಭವಾಗಬೇಕಾಗಿದ್ದ ಮಳೆ ಇನ್ನೂ ಆಟ ಆಡಿಸುತ್ತಿದೆ.
ಈ ವರುಷದ ಬೇಸಿಗೆಯ ಅಡ್ಡ ಮಳೆಯೂ ಸೆಕೆಯನ್ನು ಓಡಿಸುವಷ್ಟು ಪ್ರಭಾವಕಾರಿಯಾಗಿರಲಿಲ್ಲ. ಕಳೆದ ಹಲವಾರು ವರ್ಷಗಳಿಂದ ಭೂಮಿಯ ಒಳಗಿನ ನೀರಿನ ಮಟ್ಟವು ಕಡಿಮೆಯಾಗಿದ್ದು ಗಮನಕ್ಕೆ ಬಂದಿದೆ. ಏರು ಪೇರಾಗಿರುವ ಮಳೆಯ ಜೊತೆ ರೈತನ ಜೀವನವು ಏರುಪೇರಾಗಿದೆ.ಇದಕ್ಕೆಲ್ಲ ಕಾರಣ ಹೆಚ್ಚುತ್ತಿರುವ ಜನಸಂಖ್ಯೆ, ಮರೆಯಾಗುತ್ತಿರುವ ಕಾಡು, ಏರುತ್ತಿರುವ ಕಟ್ಟಡಗಳು ಮತ್ತು ಬದಲಾಗುತ್ತಿರುವ ಹವಾಮಾನ. ಸದ್ಯದ ಪರಿಸ್ಥಿತಿಯಲ್ಲಿ ಇದೊಂದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ.
ಇನ್ನು ಈ ತಿಂಗಳ ವಿಶೇಷ ಎಂದರೆ ಅಂತರಾಷ್ಟ್ರೀಯ ಯೋಗ ದಿನಾಚರಣೆ.
2014 ಸೆಪ್ಟೆಂಬರ್ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಯೋಗ ದಿನಾಚರಣೆಯನ್ನು ಆಚರಿಸುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪವನ್ನು ಮಾಡಿದ್ದರು. ಇದಕ್ಕೆ ವಿಶ್ವ ನಾಯಕರ ಸಹಾಯ ದೊರೆತು 2015 ರಿಂದ ಯೋಗ ಮಾಡುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಮತ್ತು ಅದರ ವಿವಿಧ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜೂನ್ 21 ರಂದು ಪ್ರಪಂಚದಾದ್ಯಂತ ವಾರ್ಷಿಕವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ದೊಡ್ಡ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಇದನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಯಿಂದ ಇದು ಅತ್ಯಂತ ಹೆಚ್ಚು ಮಹತ್ವದ ದಿನವಾಗಿದೆ.
ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಅಲ್ಲ. ಇದು ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ಧೀಕರಿಸಲು ನೆರವಾಗುತ್ತದೆ. ಪ್ರಕೃತಿ ಮಾತೆಯ ಜೊತೆಗೆ ನಮ್ಮ ಸಂರ್ಪಕವನ್ನು ಕಲ್ಪಿಸುತ್ತದೆ. ಆಧುನಿಕ ಯುಗದಲ್ಲಿ ನಾವು ಅನುಭವಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಇದು ರಾಮಬಾಣ.
ಎಂಟನೇ ವಿಶ್ವ ಯೋಗ ದಿನಾಚರಣೆಯನ್ನು ಈ ತಿಂಗಳ 21 ಕ್ಕೆ ಆಚರಿಸಲಾಗುವುದು. ವಿಶ್ವಕ್ಕೆ ಯೋಗವನ್ನು ಕೊಟ್ಟ ನಾವು ಯೋಗಾಭ್ಯಾಸವನ್ನು ಯೋಗ ದಿನಾಚರಣೆಗೆ ಸೀಮಿತವಾಗಿಡದೆ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ದೈಹಿಕ ಹಾಗು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳೋಣ.
ರೋಹಿಣಿ ಭಟ್