ನಮ್ಮ "ಯಕ್ಷಗಾನ" ಯಾ "ತಾಳಮದ್ದಳೆ"ಯ ನಂಟು...

ರಾತ್ರಿ ಅಮ್ಮ ಮಾಡಿದ ಬಿಸಿ ಬಿಸಿ ಹುಳಿಯನ್ನು ಸರಿಯಾಗಿ ಉಂಡು, ಶಾಲೆಯ ಬರೆವಣಿಗೆ ಮುಗಿಸಿ, ಇನ್ನೇನು ಮಲಗಲು ತಯಾರಿ! ಅಷ್ಟರಲ್ಲಿ, ಅಪ್ಪಯ್ಯ ತನ್ನ ಪರಕಾಳಿ ಉಟ್ಟು ಟೊಪ್ಪಿ ಹಾಕಲು ತಯಾರಿ ನಡೆಸಿದ್ದ. ದೂರದಿಂದ, ಚಂಡೆ ಸದ್ದು ಕೇಳಿಸಲು ಶುರುವಾಯ್ತು. ನಿದ್ದೆಯೆಲ್ಲಾ ಎಲ್ಹೋಯ್ತೋ ಅಂತ ಗೊತ್ತಿಲ್ಲ. ಬೇಗ ಬೇಗ ಮನೆ ಬಟ್ಟೆ ಬದಲಾಯಿಸಿ ಅಪ್ಪನ ಸಂಗಡ ಹೋಗಲು ತಯಾರು!   ಈ ದೃಶ್ಯ, ನಾವು ಶಾಲೆಗೆ ಹೋಗುವ ಕಾಲದಲ್ಲಿ ಸರ್ವೇ ಸಾಮಾನ್ಯ! ಇಲ್ಲಿ ವಿಶೇಷವೆಂದರೆ, ಅಪ್ಪ ಅಮ್ಮ ಬೇರೆ ಯಾವುದಕ್ಕಾದರೂ ಬೇಡ ಅಂತ ಹೇಳಿದರೂ, ಯಕ್ಷಗಾನ ಯಾ ತಾಳಮದ್ದಳೆ ಕಾರ್ಯಕ್ರಮಕ್ಕೆ ಬೇಡ ಅನ್ನುತ್ತಿರಲಿಲ್ಲ. ಮಕ್ಕಳನ್ನೆಲ್ಲಾ ಕರೆದುಕೊಂಡು ಹೋಗುವುದೆಂದರೆ ಅಪ್ಪನಿಗೂ ಖುಷಿ! ಯಕ್ಷಗಾನದ ಪದ್ಯ, ಪಾತ್ರಧಾರಿ ಅಥವಾ ರಾತ್ರಿ ನಡೆದ ಒಳ್ಳೆಯ ಸನ್ನಿವೇಶ, ಇತ್ಯಾದಿಗಳನ್ನು ಮರುದಿನ ಹೇಳುವದೇ ಇನ್ನೊಂದು ರೀತಿಯ ಸಂತೋಷ.

ರಾತ್ರಿಯಿಡೀ, ನಿದ್ದೆಗೆಟ್ಟು ಮುಂದೆ ಕುಳಿತು ಆ ಆಟ (ಯಕ್ಷಗಾನ) ನೋಡುವದೇ ಒಂದು ಮಜಾ. ಯಕ್ಷಗಾನದ ದಿಗ್ಗಜರಾದ ಕೆರೆಮನೆ ಶಿವರಾಂ ಹೆಗ್ಡೆ, ಮಹಾಬಲ ಹೆಗ್ಡೆ, ಗಜಾನನ ಹೆಗ್ಡೆ, ಶಂಭು ಹೆಗ್ಡೆ, ಚಿಟ್ಟಾಣಿ, ಇತ್ಯಾದಿ ಕಲಾವಿದರಿದ್ದರಂತೂ, ಮೈ ಕೊರೆಯುವ ಚಳಿಯಲ್ಲಿಯೂ ಕುಳಿತೂ ಆನಂದಿಸುವದೇ ಒಂದು ರೀತಿಯ ರೋಮಾಂಚನ. ಅದರಲ್ಲೂ, ಗದಾಯುದ್ಧ, ಭಸ್ಮಾಸುರ ಮೋಹಿನಿ,  ಭೀಷ್ಮಪರ್ವದಂತಹ ಆಟವಿದ್ದರಂತೂ ಕಣ್ಮುಚ್ಚದೆ ನೋಡುವ ಪದ್ಧತಿ. ಕೌರವ ಮೂಲತಃ ಕೆಟ್ಟವನಾಗಿದ್ದರೂ, ಯಕ್ಷಗಾನದ ಈ ದಿಗ್ಗಜರು ಆ ಪಾತ್ರವನ್ನು ತೂಗಿಸಿಕೊಂಡು ಹೋಗುತ್ತಿದ್ದ ದಿನಗಳೇ ಬೇರೆ. “ಕುರುರಾಯ ಇದನೆಲ್ಲವ ಕಂಡು, ಸಂತಾಪದಿ…” ಅಂತ ಭಾಗವತರ  ಪದ್ಯಕ್ಕೆ ಮಹಾಬಲ ಹೆಗ್ಡೆಯವರ ಕೌರವನ ಪಾತ್ರ, ನಟನೆ ಹಾಗು ಅವರ ಸಂತಾಪದ ಅರ್ಥವನ್ನು ನೋಡಿ ಕೇಳಿದಾಗ, ಬಹುತೇಕ ಎಲ್ಲರ ಕಣ್ಣಲ್ಲೂ ಅಶ್ರು.  ಶಂಭು ಹೆಗ್ಡೆ – ನೆಬ್ಬೂರು ಭಾಗವತರ ಜೋಡಿ ಇದ್ದರಂತೂ ಇನ್ನೂ ಆನಂದ.

ಒಟ್ಟಿನಲ್ಲಿ, ಯಕ್ಷಗಾನ ಮೇಳ ಊರಿನಲ್ಲಿ ಬಂದರೆ ಎಲ್ಲರೂ ಹೋಗಿ ನೋಡಲು ತಯಾರು. ಮೇಳದವರೂ ಬಹಳ ಹುಷಾರು, ಯಾವಾಗಲೂ ಒಳ್ಳೆಯ ಪ್ರಸಂಗವನ್ನು ಕೊನೆಯಲ್ಲಿ ಅಂದರೆ ಬೆಳಗಿನ ಜಾವದಲ್ಲಿ ಇಡುವದು ಸರ್ವೇ ಸಾಮಾನ್ಯ! ಡಿಸೆಂಬರದ ಕೆಟ್ಟ ಚಳಿಯಿದ್ದರೂ ಸಣ್ಣಗೆ ನಡುಗುತ್ತಾ (ಸ್ವೆಟರ್ ಹೆಚ್ಚಾಗಿ ಇರುತ್ತಿರಲಿಲ್ಲ, ಕರಿ ಕಂಬಳಿ ನಡೆಯುತ್ತಿತ್ತು), ಒಂದು ರೂಪಾಯಿಯ VIP ಆಸನದ ಮೇಲೆ ಕುಳಿತು (ಮತ್ತೇನು ಅಲ್ಲ – ನೆಲ!) ಮುಂದಿನ ಸಾಲಿನಲ್ಲಿ ವೀಕ್ಷಿಸುವದೇ ಮಹದಾನಂದ! ನಾವೆಲ್ಲಾ ಚಿಕ್ಕವರಾಗಿದ್ದರಿಂದ ಎಲ್ಲಾ ಪದ್ಯ ಅಥವಾ ಸಂಭಾಷಣೆ ಅರ್ಥವಾಗುತ್ತಿರಲಿಲ್ಲ. ಆದರೆ, ನಾವು ಅಲ್ಲಿಗೆ ಬಿಡುತ್ತಲೂ ಇರಲಿಲ್ಲ. ಮರುದಿನ, ಅಪ್ಪನಿಗೆ ಸ್ವಲ್ಪ ಪುರುಸೊತ್ತಿದ್ದಾಗ ಹಲವಾರು ನಮ್ಮದೇ ಆದ ಪ್ರಶ್ನೆ ಕೇಳಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆವು.  ಬಹುಷಃ ಶಾಲೆಯಲ್ಲೂ ಈ ರೀತಿಯ ಪ್ರಯತ್ನ ಮಾಡಿದ್ದರೆ, ನಾವೇ ಕ್ಲಾಸ್‌ಗೆ ಮೊದಲನೆಯ ಸ್ಥಾನ ಗಿಟ್ಟಿಸುತ್ತಿದ್ದೇವೋ ಏನೋ!

ಯಕ್ಷಗಾನ ಅಥವಾ ತಾಳಮದ್ದಳೆ ನಮ್ಮೆಲ್ಲರ ಬದುಕಿನ ಒಂದು ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಬಹುಷಃ ನಮ್ಮಲ್ಲಿ ಯಕ್ಷಗಾನ ಇಷ್ಟಪಡದೆ ಇರುವವರು ಇಲ್ಲಾ ಅಂತಲೇ ಅನ್ನಬಹುದು. ನಾನಂತೂ ಕೇಳಿಲ್ಲ. ಯಕ್ಷಗಾನ ನಮ್ಮಲ್ಲಿ ಹೇಗೆ ಬಂತು ಹಾಗೂ ಈ ಕಲೆ ಎಷ್ಟು ಹಳೆಯದು, ಎಂಬುದರ ಬಗ್ಗೆ ಸಾಕಷ್ಟು ಸಂಶೋಧನೆ ಆಗಿದೆ ಮತ್ತು ನಾವು ಸಾಕಷ್ಟು ಓದಿದ್ದೇವೆ.

ನನ್ನೊಳಗಿನ ಜಿಜ್ಞಾಸೆಯೆಂದರೆ, ಯಕ್ಷಗಾನ ಮತ್ತು ತಾಳಮದ್ದಳೆಯಲ್ಲಿ ಇರುವ ಅಂತರ, ಅದರ ಹುಟ್ಟು ಹಾಗು ಅದರ ಕಲಾವಿದರ ವಿದ್ವತ್ತು. ನೀವೇ ಯೋಚಿಸಿ, ಒಂದೊಮ್ಮೆ ಯಕ್ಷಗಾನದಲ್ಲಿ (ಗದಾಯುದ್ಧ) ಭೀಮ ಕುಣಿಯದೆ, ಭಾಗವತರ ಪದ್ಯ ಮುಗಿದ ಮೇಲೆ, ಕೌರವನ ಜೊತೆ ಕೇವಲ ಮಾತನಾಡಲು ಪ್ರಾರಂಭಿಸಿದರೆ! ಅದೇರೀತಿ, ಭಸ್ಮಾಸುರ ಮೋಹಿನಿ ಸಮಾಗಮದ ವೇಳೆಯಲ್ಲಿ, ಮೋಹಿನಿ ಯಕ್ಷ ನಾಟ್ಯವನ್ನು ಮಾಡದೆ ಹೋದರೆ! ಅಂದರೆ, ಯಕ್ಷಗಾನದಲ್ಲಿ ನಾವೆಲ್ಲಾ ನೀರೀಕ್ಷಿಸುವದು, ವೇಷ ಭೂಷಣ, ಭಾಗವತಿಕೆ, ನಾಟ್ಯ, ಹಾವ ಭಾವ, ಕೊನೆಯಲ್ಲಿ ಸಂಧರ್ಭೋಚಿತ ಮಾತು.   

ಯಕ್ಷಗಾನ ಎಲ್ಲ ರೀತಿಯ ಜನರನ್ನೂ ಆಕರ್ಷಿಸುತ್ತದೆ. ನಮ್ಮಲ್ಲೇ ಕೆಲಸ ಮಾಡುವ ದಿನ ನಿತ್ಯದ ಆಳೂ ಕೂಡ ನೋಡಿ ಆನಂದಿಸುವ ಹಾಗೆ ಇರುತ್ತದೆ. ಹಾಗಾಗಿ, ಯಕ್ಷಗಾನಕ್ಕೆ ಹೋಗುವವರ ಸಂಖ್ಯೆ ಜಾಸ್ತಿ. ಯಕ್ಷಗಾನದ ಕಲಾವಿದ ಕೇವಲ ಹಾವ ಭಾವ, ನಾಟ್ಯ, ವೇಷ ಭೂಷಣಗಳಲ್ಲಿ ಪರಿಣತನಾದರೆ ಸಾಲದು. ಅವನಿಗೆ ಸಮಯೋಚಿತ ಪಾತ್ರದ ಮಾತನ್ನೂ ತೂಗಿಸಿಕೊಂಡು ಹೋಗುವ ಸಾಮರ್ಥ್ಯ ಇರಬೇಕು. ನನಗೆ ತಿಳಿದಂತೆ, ಯಕ್ಷಗಾನದಲ್ಲಿ ಮಾತಿನ ಚಕಮಕಿಗೆ ಸಮಯ ಕಡಿಮೆ. ಬಹಳ ಅಪರೂಪಕ್ಕೆ, ಎರಡು ಘಟಾನುಘಟಿ ಕಲಾವಿದರು ಎದುರುಬದರಾದರೆ, ಪದ್ಯಕ್ಕೂ ಮೀರಿ ಮಾತಿನ ಜಟಾಪಟಿ ನೋಡಬಹುದು. ಸಂಧಾನದ ಕೃಷ್ಣ, ಭೀಷ್ಮ ಪರ್ವದ ಅಂಬೆ, ಗದಾಯುದ್ಧದ ಕೌರವ, ಕರ್ಣ ಅವಸಾನದ ಕರ್ಣ, ರಾಮಾಯಣದಲ್ಲಿ ರಾವಣ, ಮುಂತಾದ ಮಹತ್ವದ ಪಾತ್ರಧಾರಿಗಳು ಎದುರಾಳಿಯನ್ನು ಕಂಗಾಲು ಮಾಡುವುದು ಸರ್ವೇ ಸಾಮಾನ್ಯ. ಒಳ್ಳೆಯ ಭಾಗವತರಿದ್ದರೆ, ಯಕ್ಷಗಾನದ ಕಳೆ ಇನ್ನೂ ಮೇಲಕ್ಕೆ ಏರುತ್ತಿತ್ತು – ನೆಬ್ಬೂರು ಭಾಗವತರು, ಕಾಳಿಂಗ ನಾವುಡರು ಮುಂತಾದ ಹೆಸರುವಾಸಿ ಭಾಗವತರಿದ್ದರೆ, ಆ ದಿನದ ಆಟಕ್ಕೆ, ನೂಕು ನುಗ್ಗಲು!

ಇನ್ನು, ತಾಳಮದ್ದಳೆ ಕಾರ್ಯಕ್ರಮ ಎಲ್ಲಾ ಜನರಿಗಾಗಿ ಅಲ್ಲಾ.  ಇಲ್ಲಿ ಕಲಾವಿದ ಯಕ್ಷಗಾನದ ಕಲಾವಿದನಾಗಿರಲೂ ಬಹುದು, ಅಥವಾ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುವ ವಿದ್ವಾನ್‌ ಇರಬಹುದು.  ಕೆರೆಕೈ ಕೃಷ್ಣ ಭಟ್ಟರು ಅಥವಾ ಅವರ ಮಗ ವಿ. ಉಮಾಕಾಂತ ಭಟ್ಟರು, ಯಕ್ಷಗಾನದ ಕಲಾವಿದರಲ್ಲ.  ಹಾಗೆಯೇ, ಶೇಣಿಯವರು.  ತಾಳಮದ್ದಳೆ ಕಲಾವಿದನಿಗೆ  ಪಾತ್ರದ ಬಗ್ಗೆ ಸಂಪೂರ್ಣ ಅರಿವು, ಪಾತ್ರದ ಮೇಲೆ ಹಿಡಿತ ಹಾಗು ಎದುರಾಳಿಯ ಮಾತಿಗೆ ತಕ್ಕ ಚಾಣಾಕ್ಷ ಪ್ರತಿಕ್ರಿಯೆ. ತಾಳಮದ್ದಳೆಯ ಯಶಸ್ಸು ಪಾತ್ರಧಾರಿಗಳ ವಿದ್ವತ್ತಿನ ಮೇಲೆ ಅವಲಂಬಿಸಿರುತ್ತದೆ.  ಹಾಗಾಗಿ, ತಾಳಮದ್ದಳೆಯ ಕಥೆಯನ್ನು ಆರಿಸುವಾಗ,  ಯೋಜಕರು, ಕಲಾವಿದರ ಆಯ್ಕೆ ಮತ್ತು ವಿಷಯದ ಮೇಲಿನ ಹಿಡಿತವನ್ನು ನೋಡಿ ತೀರ್ಮಾನಿಸುತ್ತಾರೆ. ತಾಳಮದ್ದಳೆ ನೋಡಲು ಬರುವ ಜನರೂ ಕೂಡ, ರಾಮಾಯಣ ಅಥವಾ ಮಹಾಭಾರತ ಅಂತ ಕತೆಗಳನ್ನು ಸಾಕಷ್ಟು ಓದಿ ಬಲ್ಲವರಾಗಿರುತ್ತಾರೆ. ತಾಳಮದ್ದಳೆಯಲ್ಲಿ, ಮಾತಿನ ಜಟಾಪಟಿ ಕೇಳುವುದೇ ಒಂದು ರೀತಿಯ ರೋಮಾಂಚನ! ಕೆಲವೊಮ್ಮೆ, ಮಾತಿನ ಚಕಮಕಿಯಲ್ಲಿ, ಮೂಲ ಕಥೆಯನ್ನು ಬಿಟ್ಟು, ಉಪಕತೆಯ ಆಧಾರದ ಮೇಲೆ ವಾಗ್ವಾದ ಮುಂದುವರಿದಿದ್ದೂ ಇದೆ!    

ಕೊನೆಯದಾಗಿ, ನಮಗೆ ಅತಿ ಹೆಮ್ಮೆಯ ವಿಷಯವೆಂದರೆ, ಈ ಯಕ್ಷಗಾನ ಯಾ ತಾಳಮದ್ದಳೆ ಕಲೆ ಇನ್ನೂ ಚೆನ್ನಾಗಿ ಬೆಳೆಯುತ್ತಿದೆ. ಪ್ರತಿ ಊರಿನಲ್ಲಿ ಅಥವಾ ಸಣ್ಣ ಸಣ್ಣ ಪಟ್ಟಣದಲ್ಲಿ, ಕಲೆಗೆ ಪ್ರೋತ್ಸಾಹ ಸಿಗುತ್ತಿದೆ. ಅಷ್ಟೇ ಅಲ್ಲಾ, ಈಗ ಮಹಿಳೆಯರು ಯಕ್ಷಗಾನದಲ್ಲಿ ಭಾಗವಹಿಸುತ್ತಿದ್ದಾರೆ. ಮಹಿಳೆಯರು, ತರುಣಿಯರು ಭಾಗವತಿಕೆ ಅಥವಾ ಯಕ್ಷಗಾನದ ಮುಮ್ಮೇಳದಲ್ಲಿ ಬಂದು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಹಿಂದೆ, ಮಹಿಳೆಯ ಪಾತ್ರವನ್ನು ಗಂಡಸರೇ ನಿರ್ವಹಿಸುತ್ತಿದ್ದರು. ಈಗ ಕಾಲ ಬದಲಾಗುತ್ತಿದೆ. ಇದು ಈ ಕಲೆಗೆ ಒಳ್ಳೆಯ ಲಕ್ಷಣ. ಹಿರಿಯರು ಯಕ್ಷಗಾನ ಎಲ್ಲಿ ಕಾಲಕ್ರಮೇಣ ಮುದುಡಿಹೋಗತ್ತೋ ಅಂತ ಅಂದುಕೊಂಡಿದ್ದರೋ, ಹಾಗೆ ಆಗುತ್ತಿಲ್ಲ.

ನಾವೆಲ್ಲಾ, ಈ ಹೊರನಾಡಿನಲ್ಲಿ, ಈ ಯಕ್ಷಗಾನ ಮೇಳಗಳನ್ನು ಕರೆದು ಪ್ರೋತ್ಸಾಹಿಸಿದರೆ, ನಮ್ಮ ಈ ಅಳಿಲು ಸೇವೆ, ಯಕ್ಷಗಾನವನ್ನು ಇನ್ನೂ ಮುಂದೆಯೂ ಬೆಳೆಸಲು  ಅಥವಾ ಉಳಿಸಲು ದಾರಿಯಾಗಬಹುದು. ಅಂತೆಯೇ, ನಾವು ಕೂಡ, ಸ್ಥಳೀಯ ಕಲಾವಿದರನ್ನು ಸೇರಿಸಿ, ನಮ್ಮದೇ ಆದ ಯಕ್ಷಗಾನ ಯಾ ತಾಳಮದ್ದಳೆ ತಂಡವನ್ನು ತಯಾರಿ ಮಾಡುವ ದಿಶೆಯಲ್ಲಿ ಯೋಚಿಸಬೇಕಾಗಿದೆ. ಪ್ರಯತ್ನಕ್ಕೆ ತಕ್ಕ ಪ್ರತಿ ಫಲ ಸಿಗಬಹುದು ಅಂತ ದೂರದ ನನ್ನ ಆಸೆ. 

 

 

 

 

 

ಡಾ. ಶ್ರೀಪಾದ ಭಟ್ಟ

ಗುರುಗ್ರಾಮ, ಹರಿಯಾಣ

Leave a Reply

Your email address will not be published. Required fields are marked *